ಸ... ಪ... ಸ...

 ಸ... ಪ... ಸ...

 ಮೈಸೂರು  ದಸರಾ 

ಎಷ್ಟೊಂದು  ಸುಂದರ ....  

ಎಂತಹ ಸುಂದರ ಹಾಡು ಅತ್ಯದ್ಭುತ ಮೈಸೂರಿನ ವರ್ಣನೆ. ದಸರಾ ಅಂದಕೂಡಲೇ ಮೈಸೂರಿನ ಅರಮನೆ,ಅಂಬಾರಿ ,ಚಾಮುಂಡಿ ಬೆಟ್ಟ ,ಆನೆಗಳು ,ನೃತ್ಯ ,ಸಂಗೀತ ,ಡೊಳ್ಳು ಕುಣಿತ ,ಸ್ತಬ್ದ ಚಿತ್ರಗಳ ಮೆರೆವಣಿಗೆ. ಇದನೆಲ್ಲಾ ನೋಡಲು ದೇಶ ವಿದೇಶಗಳಿಂದ ಜನರು ಬರುತ್ತಾರೆ.ಹುಟ್ಟಿದ್ದು ಮಾತ್ರ ಹುಬ್ಬಳ್ಳಿಯಲ್ಲಿ ಆದರೆ ಬಾಲ್ಯ ಹಾಗು ವಿದ್ಯಾಭ್ಯಾಸವೆಲ್ಲ ಮೈಸೂರಿನಲ್ಲಿ.  ನಮ್ಮ ಮನೆಗೂ ಊರಿಂದ ನೆಂಟರು ಇಷ್ಟರು ಈ ಮಹೋತ್ಸವನ್ನು ನೋಡಲು ಬರುತ್ತುದ್ದರು. 

ಮೈಸೂರಿನವರಿಗೆ ದಸರಾ ಕೇವಲ ೧೦ ದಿನದ ಉತ್ಸವವಲ್ಲ. ತಿಂಗಳ ಮುಂಚಿತವಾಗಿಯೇ ಉತ್ಸವದ ತ್ಯಯಾರಿ. ಒಂದೆಡೆ ಅಂಬಾರಿಯ ಆನೆಗಳು ನಗರಕ್ಕೆ ಬಂದಿಳಿದರೆ ಮತ್ತೊಂದೆಡೆ ಸಾಲು ಸಾಲಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉತ್ಸವ. ಮನೋರಂಜನೆಯ ಕಾರ್ಯಕ್ರಮಗಳು ಅತಿರಂಜಿತವಾದಾಗ ನಮ್ಮ ಮನ್ನಸಿನ ಮೇಲೆ ಪ್ರಭಾವ ಬೀರದೆ ಇರುವುದೇ. ನಾವು ಚಿಕ್ಕವರಿದ್ದಾಗ ನಮ್ಮ ಅದೃಷ್ಟವೇನೆಂದರೆ ಅರಮನೆಯ ದರ್ಬಾರಿನ ಸಭಾಂಗಣದಲ್ಲಿ ಕುಳಿತು ಸಂಗೀತ ಕಾರ್ಯಕ್ರಮವನ್ನು ಆನಂದಿಸುವ ಅವಕಾಶ. ಇದರ ಸಂಪೂರ್ಣ ಶ್ರೇಯ ನನ್ನ ತಂದೆ ತಾಯಿಗೆ ಸೇರಬೇಕು. ನನ್ನ ತಾಯಿ ತಪ್ಪದೆ ಗಾಯನ ,ಸಂಗೀತ ವಾದ್ಯಗಳ ಕಾರ್ಯಕ್ರಮಕ್ಕೆ  ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದರು. ಅಕ್ಕಪಕ್ಕದ ಮನೆಯವರ ಜೊತೆಗೆ ಹೋದಾಗಂತೂ ನಾವೆಲ್ಲಾ ಮಕ್ಕಳ್ಳು ಗಾಯಕರ ,ವಿದ್ವಾಂಸರ ಪಾಂಡಿತ್ಯ ಆ ಕಾರ್ಯಕ್ರಮದ ಮಹತ್ವ ನಮಗೆ ಆಗ ತಿಳಿಯುತ್ತಿರಲಿಲ್ಲ ಹೀಗಾಗಿ ಎಲ್ಲರು ಹೊರಗೆ ತೋಟದಲ್ಲಿ ಆಡುತ್ತಿದ್ವಿ . ಭೀಮಸೇನ್ ಜೋಶಿ ,ಗಂಗೂಬಾಯಿ ಹಾನಗಲ್  ,ಮ್ ಸ್ ಸುಬ್ಬುಲಕ್ಷ್ಮಿ, ಬಾಲಮುರಳಿಕೃಷ್ಣ ,ಉಸ್ತಾದ್ ಜಾಕಿರ್ ಹುಸಸೈನ್,ಮಲ್ಲಿಕಾ ಸಾರಾಭಾಯ್  ಹೀಗೆ ಹೆಸರು  ಹೇಳುತ್ತಾ ಹೋದರೆ ಕಲಾರತ್ನಗಳ ಪಟ್ಟಿ ಮುಗಿಯದು. ಈಗ ಇವರ ಕಾರ್ಯಕ್ರಮ ನೋಡಬೇಕೆಂದರೆ ಸಾವಿರಾರು ರೂಪಾಯಿ ಕೊಟ್ಟರು ಎಲ್ಲೋ ದೂರದಲ್ಲಿ ಕುಳಿತು ಕೇಳಬೇಕು.

ಊರಿನೆಲ್ಲೆಡೆ ಸಂಗೀತ ನೃತ್ಯ ಕಲಿಯುವ ಕಲಿಸುವ ಸಂಪ್ರದಾಯ. ಹತ್ತು ಚದುರಳತೆಯ ವಿಸ್ತ್ರೀರ್ಣದಲ್ಲಿ ಕನಿಷ್ಠ ಪಕ್ಷ ಒಂದು ಮನೆಯಲ್ಲಾದರೂ ದಿನವಿಡೀ ಸಂಗೀತದಿಂದ ಬೀದಿ ನಾದಮಯ. ಸಾಂಸ್ಕೃತಿಕ  ರಾಜಧಾನಿ ಎಂದೇ ಪ್ರಸಿದ್ಧವಾದ ನಗರದ ಸಂಸ್ಕೃತಿ ಎಷ್ಟು ಶ್ರೀಮಂತ. ೮೦ರ ದಶಕದಲ್ಲಿ ನನ್ನ ಬಾಲ್ಯದ ಮೈಸೂರು ರಾಗ ತಾಳ ಲಯದಲ್ಲಿ ಕಳೆದಿತ್ತು. ಒಡೆಯರ  ಕಡೇಯ ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ ಕಾಲದಲ್ಲಿ ವೈಭವದಿಂದ ಮೆರೆದ  ಲಲಿತಕಲೆಗಳು ,ಕ್ರೀಡೆ ಮತ್ತು ಸಾಹಿತ್ಯಮಯ ನಗರ ಹೇಗಿರಬಹುದೆಂದು ನಾನು ಕೇವಲ ಕಲ್ಪನೆ ಮಾಡಿಕೊಳ್ಳಬಹುದು.ಅರಮನೆಯೊಳಗೆ  ತುಂಬಿದ   ಚಿತ್ರಕಲೆಗಳು,ಸಿಂಹಾಸನ, ರಾಜೋಪೇತ ಪೀಠೋಪಕರಣಗಳು, ಆಭರಣರಗಳು ಮಾತ್ರವಲ್ಲಿ ಸಂಗೀತ ವಾದ್ಯಗಳು ,ಅತಿ ವಿರಳ ವಾದ್ಯಗಳ ,ಪಾಶ್ಚತ್ಯ  ವಾದ್ಯಗಳು ,ಚಿತ್ರಕಲೆಗಳ ಹಾಗು ವರ್ಣಚಿತ್ರಗಳ ಎಲ್ಲೆಲ್ಲಿ ನೋಡಿದರು. ಭಾರತದ ವಿವಿದೆಡೆಯಿಂದ ಸಂಗೀತಕಾರನ್ನು ,ಸಾಹಿತಿಗನ್ನು ಮೈಸೂರಿಗೆ ಆಹ್ವಾನಿಸಿ ಗೌರವಿಸುವುದು ಸಾಮಾನ್ಯವಾಗಿತ್ತು.

 ಎಲ್ಲರಿಗು ದಸರಾ ಅಂದರೆ ಮೆರವಣಿಗೆ ನೋಡಲು ಹೋಗುವುದು, ವಸ್ತು ಪ್ರದರ್ಶನ ಮೈದಾನಲ್ಲಿ ಡೆಲ್ಲಿ ಹಪ್ಪಳ ,ಚುರಮುರಿ ತಿನ್ನೋದು ಮತ್ತೆ ಕೆಲವರಿಗೆ ತಮ್ಮ ಸುತ್ತ ಮುತ್ತಲು ನಡೆಯುವ ಸಂಗೀತ ,ನೃತ್ಯ ಕಚೇರಿಗಳಲ್ಲಿ ಸಂಜೆ ಕಳೆಯುವುದು. ಆದರೆ ನನಗೆ ತುಂಬಾ ಖುಷಿ ,ಉತ್ಸಾಹ ಕೊಡುತ್ತಿದ್ದು ನವರಾತ್ರಿಯ ಸರಸ್ವತಿ ಪೂಜೆ. ಈ ದಿನದ ತಯ್ಯಾರಿಗೆ ನಮ್ಮ ಸಂಗೀತದ  ಗುರುಗಳು ನಮ್ಮನ್ನು ಗುಂಪುಗಳನ್ನು ಮಾಡಿ ಯಾವಯಾವ ಕೃತಿಗಳನ್ನ  ಹಾಡಬೇಕೆಂದು ಹೇಳಿ ಅಭ್ಯಾಸ ಮಾಡಿಸುತ್ತಿದ್ದರು.

 ಚಿಕ್ಕಂದಿನಲ್ಲಿ ನನಗೆ ಸಂಗೀತದಲ್ಲಿ ಅಷ್ಟೊಂದು ಆಸಕ್ತಿ ಇರಲಿಲ್ಲ. ಅಮ್ಮನ ಒತ್ತಾಯಕ್ಕೆ ಸಂಗೀತ ಕಲಿಯಲು ಹಿಂದಿನ ಬೀದಿಯ ಮೇಡಂ ಹತ್ತರ ನಾನು ನನ್ನ ಅಕ್ಕ ಸೇರಿಕೊಂಡ್ವಿ. ಅಗಾ ಸ ..ಪ .. ಸ .. ಅಂದರೆ ಏನು ಅಂತ ಗೊತ್ತೇಇರ್ಲಿಲ್ಲ ..ಈಗ್ಲೂ ಗೊತ್ತಿಲ್ಲ ಬಿಡಿ .. ಸುಮಾರು ದಿನಗಳು ,ವರ್ಷಗಳು ಹೀಗೆ ನಮ್ಮ ಸಾಯಕ್ಕನ   ಜೊತೆ ದೇಯಕ್ಕ ಅಂತ ಸಂಗೀತ ಮುಂದುವರೆಸಿದೆ.. ಮೈಸೂರಿನ ಸಂಪ್ರದಾಯವೇನೆಂದರೆ ಎಲ್ಲರೂ ಯಾವುದಾದರೊಂದು ಕಲೆಯಲ್ಲಿ  ಆಸಕ್ತಿ ತೋರಿಸಲೇ ಬೇಕು. ನಾನು ಸಂಗೀತದಲ್ಲಿ , ನನ್ನ ಅಕ್ಕ ಸಂಗೀತ ಹಾಗು ನೃತ್ಯ ಎರಡರಲ್ಲೂ . ನಿಜ ಹೇಳ್ಬೇಕು ಅಂದ್ರೆ ಇಡೀ ಬೀದಿಯ ಮಕ್ಕಳೆಲ್ಲ ಬೆಳ್ಳಿಗ್ಗೆ ೭ ಘಂಟೆಗೆ ಒಟ್ಟಿಗೆ ಹಿಂದಿನ ಬೀದಿಯ ಗುರುಗಳ ಮನೆಗೆ ಒಂದು ಮೆರವಣಿಗೆ ಮಾಡಿಕೊಂಡು ಹೋಗುವುದು. ನಮ್ಮ ಗುರುಗಳು ಹೇಳಿದ್ದು ನಾನು  ಏನೋ ಹಾಡ್ತಿದ್ದೆ ಆದ್ರೆ ಶ್ರುತಿ ,ರಾಗ ,ತಾಳ ಎಲ್ಲ ಅಲ್ಲೊಲ್ಲ ಕಲ್ಲೋಲ ..ಎಲ್ಲಾ ರಾಗಗಳು ಒಂದೇ ಥರ ಅನಿಸುತ್ತಿತ್ತು. ನಾನು ಬೆಳೆದಂತೆ ಸಂಗೀತದಲ್ಲಿ ಒಲವು ಕಡಿಮೆ ಆಯಿತು. ಮ್ಯಾಟ್ರಿಕ್ ಅಂತಾನೋ ಏನೋ ಗೊತ್ತಿಲ್ಲ ,ಕಲಿಯುವಿಕೆ ಅಲ್ಲಿಗೆ ನಿಂತಿತು.ಆದರೆ ದಸರಾ ,ಸಂಗೀತ ಕಚೇರಿ ,ಟಿವಿ ಯಲ್ಲಿನ ಕಾರ್ಯಕ್ರಮ ಸದಾ ನನ್ನನ್ನು ಆಕರ್ಷಿಸುತ್ತಿತ್ತು. ಆಗ ಇಂಟರ್ನೆಟ್ ಇರಲಿಲ್ಲ ,ಮೊಬೈಲ್ ಫೋನ್ ಇಲ್ಲ ,ಫೇಸ್ಬುಕ್ ವಾಟ್ಸಪ್ಪ್ ಹಾವಳಿ ಇಲ್ಲ . ಕಾಲೇಜ್ ವಿದ್ಯಾಭ್ಯಾಸದ ಧಗೆ ಜೋರಾದ್ರಿಂದ ಒಂಥರಾ ಪೂರ್ತಿಯಾಗಿ ನಿಂತಿತು. ನಂತರ ಬೆಂಗಳೂರಿಗೆ ನನ್ನ ತಂದೆಯ ವರ್ಗಾವಣೆ ಅದ್ರಿಂದ ಅಲ್ಲಿ ಅಷ್ಟು ಜನರ ಪರಿಚಯ ಇರಲಿಲ್ಲ ಮತ್ತು ನನ್ನ ಓದು ಕೆಲಸದ ನಡುವೆ ಸಮಯವೇ ಸಾಕಾಗಲಿಲ್ಲ. ಆದರೆ ಎಲ್ಲೋ ಮಸ್ಸಿನ ಆಳದಲ್ಲಿ ಸಂಗೀತದ ಒಲವು ಬೇರೂರಿತ್ತು. ಮೈಸೂರಿನಲ್ಲಿ ಇದ್ದೀರಾ ಅಂದರೆ  ಸಂಗೀತ ,ನೃತ್ಯದಿಂದ ತಪ್ಪಿಸಿಕೊಳ್ಳವು ಸಾಧ್ಯವೇ ಇಲ್ಲ .ನಿಮಗೆ ಕಲಿಯಲು ಆಸಕ್ತಿ ಇಲ್ಲದಿದ್ದರೂ ಕಿವಿಗೆ ಮಾತ್ರ ತಪ್ಪದೆ ಬೀಳುತ್ತದೆ. ಯಾವುದೇ ಹಬ್ಬವಿರಲಿ ,ಸಭೆ ,ಸಮಾರಂಭ ,ಉತ್ಸವ ಸಂಗೀತವಿಲ್ಲದೆ ಊಹಿಸಲು ಸಾಧ್ಯವಿಲ್ಲ.


ಈಗ ಸುಮಾರು ೨೦ ವರ್ಷಗಳ ನಂತರ ಸಂಗೀತದ ಮೇಲೆ ಅಪಾರ ಪ್ರೇಮ ಕಲಿಯುವ ಆಸಕ್ತಿ. ಆದರೆ ಮಕ್ಕಳು, ಮನೆಕೆಲಸ, ನನ್ನ ಇತರ ಕೆಲಸಗಳ ನಡುವೆ ಹೇಗೆ ಕಲಿಯುವುದು ಅನ್ನುವುದೇ ಒಂದು ಪ್ರಶ್ನೆ. ಯಾವುದೇ  ವಿದ್ಯೆ ಕಲಿಯಲು ಬಹು ಮುಖ್ಯವೇನೆಂದರೆ ಶ್ರದ್ಧೆ ,ಶಿಸ್ತು ,ಸತತ ನಿರಂತ ಅಭ್ಯಾಸ. ಅದಕ್ಕೆ ಅಂತಾನೆ ದಿನನಿತ್ಯ ನಿದಿಷ್ಟವಾದ ಸಮಯ ನೀಡಬೇಕು.  ಸಂಗೀತದಲ್ಲಿ ಚಿತ್ರಕಲೆಯಲ್ಲಿ ಆಸಕ್ತಿ ತಂದವಳೇ ನನ್ನ ತಾಯಿ. ವಾಸ್ತವದಲ್ಲಿ ಇದು ನನ್ನದಷ್ಟೇ ಅಲ್ಲ ನನ್ನ ಸ್ನೇಹಿತೆಯರ ಕಥೆಯು ಇದೆ. ನಮ್ಮ ತಂದೆ ತಾಯಿಯರ ಬಲವಂತಕ್ಕೆ ಅಂತ ಶುರು ಮಾಡಿ ನಂತರ ಬಿಟ್ಟು ಈಗ ಆಶ್ಚರ್ಯಕರವಾದ ರೀತಿಯಲ್ಲಿ ಮತ್ತೆ ಅದೇ ಕಲೆಯಲ್ಲಿ ಅದಮ್ಯವಾದ ಆಸಕ್ತಿ!! 


ತಂದೆ ತಾಯಿರ ಅನುಭವ ಅವರ ತಿಳುವಳಿಕೆಯ ಮೇಲೆ ಭರವಸೆ ಇಡುವುದು ಆ ವಯಸ್ಸಿನ್ನಲ್ಲಿ ನಮಗೆ ತಿಳಿಯುವುದಿಲ್ಲ.ಯಾಕೆ ನಮಗೆ ಇಷ್ಟು ಬಲವಂತ ಮಾಡ್ತಾರೆ ,ಅವರಿಗೆ ಯಾಕೆ ಅರ್ಥ ಆಗೋದಿಲ್ಲ ಅಂತ ನಾವು ಅವಾಗ ಅವರನ್ನ ಮನ್ನಸಿನ್ನಲ್ಲಿ ತುಂಬಾ ಬೈಕೋತೀವಿ. ಈಗಿನ ಪೀಳಿಗೆಯಂತೆ ಆಗ ನಮಗೆ ಅಷ್ಟೊಂದು ಆಯ್ಕೆಗಳು ಇರುತ್ತಿಲ್ಲ .ಹೀಗಾಗಿ ಆಗಿನ ಕಾಲ ತಕ್ಕಂತೆ ಅವರು ನಮಗೆ ಸಾಕಷ್ಟು ರೀತಿಯಲ್ಲಿ ಪ್ರೋತ್ಸಾಹಿಸುತ್ತಾರೆ. ಈಗ ಪ್ರಯೋಗ ಮಾಡುವ ಕಾಲ.ಹತ್ತಾರು ರೀತಿಯ ಕಲೆಗಳ ಆಯ್ಕೆಗಳು ಮತ್ತು ಅವುಗಳನ್ನು ಕಲಿಯಲು ಮಾಧ್ಯಮಗಳು ಸುಲಭವಾಗಿ ಲಭ್ಯ.ಈರೀತಿ ಪ್ರಯೋಗ ಮಾಡುವದರಿಂದ ಮಕ್ಕಳಿಗೆ ಎಲ್ಲಾ ತರಹದ ಜಗತ್ತಿಗೆ  ಪರಿಚಯಿಸಿದಂತೆ ಆಗುತ್ತದೆ , ಆದ್ರೆ ಅವರು ಯಾವುದರಲ್ಲಿ ಹೆಚ್ಚು ಆಸಕ್ತಿ ಅಥವಾ ಅವರ ಬಲವಾದ ಪ್ರತಿಭೆ ಯಾವುದರಲ್ಲಿ ಎನ್ನುವುದನ್ನು ನಾವು ಸರಿಯಾಗಿ ತಿಳಿಯಬೇಕು. 


ಒಟ್ಟಿನಲ್ಲಿ ನನ್ನ ಸ..ಪ,,ಸ.. ಯಾವಾಗ ಶ್ರುತಿ ಹಿಡಿಯುತ್ತದೆ ಎಂದು ನಾನು ಕಾಯುತ್ತ ,ಪ್ರತಿದಿನ ಮೈಸೂರು, ನನ್ನ ಗುರುಗಳು ,ತಾಯಿಯ ಮಾತು ಎಲ್ಲಾ ನೆನಪಿಸಿಕೊಳ್ಳುತ್ತಾ ನನ್ನನ್ನು ನಾನೇ ಬೈಯುವಂತಾಗಿದೆ. ಆಗ ದೊಡ್ಡವರ ಮಾತು ಕೇಳಿದ್ದಾರೆ ಈಗ ಶ್ರುತಿ ಸೇರಿ ಸ್ವಲ್ಪ ಮಟ್ಟಿಗೆ ನನ್ನ ಸಂತೋಷಕ್ಕಾದರೂ ಹಾಡು ಹಾಡಬಹುದಿತ್ತಲ್ವಾ !!!!

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸನಾತನ ''ಸುಧರ್ಮ''

Quantitative Easing!!!

ಮಲ್ಲಿಗೆಯ ಜಿಜ್ಞಾಸೆ